ಸಿಂಧನೂರು ತಾಲ್ಲೂಕಿನ ಹಂಚಿನಾಳ ಕ್ಯಾಂಪಿನಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿ ಒಂದೂವರೆ ವರ್ಷದ ಕಂದಮ್ಮನನ್ನು ಅತ್ಯಂತ ಕ್ರೂರವಾಗಿ ಕಚ್ಚಿ ಕೊಂದಿರುವ ಹೃದಯವಿದ್ರಾವಕ ಘಟನೆ ಬುಧವಾರ ಬೆಳಗಿನ ಜಾವ ಜರುಗಿದೆ. ಮೃತ ದುರ್ದೈವಿ ಮಗುವನ್ನು ಅನಂ ಅಬ್ದುಲ್ ರಜಾಕ್ (1.5 ವರ್ಷ) ಎಂದು ಗುರುತಿಸಲಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಪೋಷಕರು ತಮ್ಮ ಮನೆಯ ಮುಂದೆ ಸೀರೆಯಿಂದ ತಾತ್ಕಾಲಿಕ ಜೋಳಿಗೆಯನ್ನು ಕಟ್ಟಿ, ಅದರಲ್ಲಿ ಮಗುವನ್ನು ಮಲಗಿಸಿದ್ದರು. ತಂದೆ-ತಾಯಿ ಇಬ್ಬರೂ ಮನೆಯ ಮುಂಭಾಗದಲ್ಲೇ ಇದ್ದ ಕಟ್ಟೆಯ ಮೇಲೆ ನಿದ್ರಿಸುತ್ತಿದ್ದರು. ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅಲ್ಲಿಗೆ ಬಂದ ಬೀದಿ ನಾಯಿಗಳ ಹಿಂಡು, ಜೋಳಿಯಲ್ಲಿದ್ದ ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿ, ಅಲ್ಲಿಂದ ಎಳೆದೊಯ್ದಿವೆ. ಪೋಷಕರು ತೀವ್ರ ನಿದ್ರೆಯಲ್ಲಿದ್ದರಿಂದ ಈ ಘಟನೆ ತಕ್ಷಣಕ್ಕೆ ಅವರ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.
ಬೆಳಗ್ಗೆ ಸುಮಾರು 6 ಗಂಟೆಯ ವೇಳೆಗೆ ಮಗುವಿಗಾಗಿ ಹುಡುಕಾಟ ನಡೆಸಿದಾಗ, ಮನೆಯ ಪಕ್ಕದಲ್ಲೇ ಇರುವ ಕೋಳಿ ಫಾರಂ ಮುಂಭಾಗದಲ್ಲಿ ಮಗುವಿನ ರಕ್ತಸಿಕ್ತ ಶವ ಪತ್ತೆಯಾಗಿದೆ. ನಾಯಿಗಳ ಹಿಂಸಾತ್ಮಕ ದಾಳಿಯಿಂದಾಗಿ ಮಗುವಿನ ಮುಖ, ಕೈ, ಕಾಲು ಹಾಗೂ ಹೊಟ್ಟೆಯ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ.
ಈ ಘಟನೆಯಿಂದ ಇಡೀ ಗ್ರಾಮದಲ್ಲಿ ತೀವ್ರ ಶೋಕ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯ ನಿವಾಸಿಗಳು ಬೀದಿ ನಾಯಿಗಳ ಹಾವಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಇಂತಹ ದುರಂತಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.